Teachers for Inclusive Society

ಸಂಪನ್ಮೂಲ ವಿಜ್ಞಾನ ಶಿಕ್ಷಕರು

ಶಾಲೆಯಲ್ಲಿ ಹತ್ತು ತರಗತಿ ಕೋಣೆಗಳಿದ್ದು ಅವು ದಾಖಲಾತಿ ಪಡೆದ ಮಕ್ಕಳ ಸಂಖ್ಯೆಗೆ ಸಾಕಾಗುತ್ತವೆ. ಮೂರನೆಯವರೆಗಿನ, ಕೆಳ ತರಗತಿಗಳಲ್ಲಿರುವ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತುಕೊಳ್ಳುತ್ತಾರೆ ಹಾಗೂ ಅವರಿಗೆ ನಲಿ-ಕಲಿ ವಿಧಾನವನ್ನು ಬಳಸಿ ಕಲಿಸಲಾಗುತ್ತದೆ. ಮೇಲಿನ ತರಗತಿಗಳಲ್ಲಿ ಡೆಸ್ಕ್‌ ಮತ್ತು ಬೆಂಚುಗಳಿವೆ.

Print Friendly, PDF & Email

ಸಂಪನ್ಮೂಲ ವಿಜ್ಞಾನ ಶಿಕ್ಷಕರು

ಧರ್ಮಪಾಲ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ರಾಜೋಳ (ಕೆ), ಸೇಡಂ ತಾಲೂಕು, ಕಲಬುರ್ಗಿ ಜಿಲ್ಲೆ

ಲೇ: ಶರದ್ ಸುರೆ ಮತ್ತು ಮಹಬೂಬ ಪೀರ

This is a translation of the article originally written in English

ಪರಿಚಯ:

2011ರ ಜನಗಣತಿಯ ವರದಿಯ ಪ್ರಕಾರ, ರಾಜೋಳವು ಸುಮಾರು 280 ಕುಟುಂಬಗಳಿರುವ ಚಿಕ್ಕ ಹಳ್ಳಿ. ತರುವಾಯ ಸಮುದಾಯ ಸಂಘರ್ಷದ ಪರಿಣಾಮವಾಗಿ ಸುಮಾರು 30 ಕುಟುಂಬಗಳು ಹಳ್ಳಿಯಿಂದ ಬೇರೆಡೆಗೆ ವಲಸೆ ಹೋಗಿದ್ದಾರೆ. ಶಾಲೆಯಲ್ಲಿ I- VII ನೆಯ ತರಗತಿಯವರೆಗೆ ದಾಖಲಾತಿ ಪಡೆದ ಸರಿಸುಮಾರು 110 ವಿದ್ಯಾರ್ಥಿಗಳಿದ್ದಾರೆ. ಅದರಲ್ಲಿ 60 ಗಂಡುಮಕ್ಕಳು ಮತ್ತು 50 ಹೆಣ್ಣು ಮಕ್ಕಳು. 37 ವಿದ್ಯಾರ್ಥಿಗಳು ಪರಿಶಿಷ್ಟ ಜಾತಿಗೆ (Scheduled Caste-SC) ಸೇರಿದ ಸಮುದಾಯದವರಾಗಿದ್ದರೆ, 19 ವಿದ್ಯಾರ್ಥಿಗಳು ಇತರ ಹಿಂದುಳಿದ ಜಾತಿಗಳಿಗೆ (Other Backward Castes-OBC) ಸೇರಿದವರಾಗಿದ್ದಾರೆ. ಸದ್ಯಕ್ಕೆ ಶಾಲೆಯಲ್ಲಿ ಮೂವರು ಶಿಕ್ಷಕರು ಹಾಗೂ ಒಬ್ಬರು ಅತಿಥಿ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ.

ಶಾಲೆಯಲ್ಲಿ ಹತ್ತು ತರಗತಿ ಕೋಣೆಗಳಿದ್ದು ಅವು ದಾಖಲಾತಿ ಪಡೆದ ಮಕ್ಕಳ ಸಂಖ್ಯೆಗೆ ಸಾಕಾಗುತ್ತವೆ. ಮೂರನೆಯವರೆಗಿನ, ಕೆಳ ತರಗತಿಗಳಲ್ಲಿರುವ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತುಕೊಳ್ಳುತ್ತಾರೆ ಹಾಗೂ ಅವರಿಗೆ ನಲಿ-ಕಲಿ ವಿಧಾನವನ್ನು ಬಳಸಿ ಕಲಿಸಲಾಗುತ್ತದೆ. ಮೇಲಿನ ತರಗತಿಗಳಲ್ಲಿ ಡೆಸ್ಕ್‌ ಮತ್ತು ಬೆಂಚುಗಳಿವೆ. ವಿಜ್ಞಾನದ ಚಟುವಟಿಕೆಗಳಿಗೆಂದೇ ಮೀಸಲಾದ ವಿಜ್ಞಾನ ಸಂಪನ್ಮೂಲ ಕೊಠಡಿಯಿದೆ ಹಾಗೂ ಸುಮಾರು 50 ವಿದ್ಯಾರ್ಥಿಗಳು ಕುಳಿತುಕೊಳ್ಳಬಹುದಾದ ಚಿಕ್ಕದೊಂದು ಸಮಾವೇಶ ಕೊಠಡಿಯಿದೆ (Conference Room). ಆಯತಾಕಾರದ ಆಟದ ಮೈದಾನವೊಂದಿದೆ. ಅಚ್ಚುಕಟ್ಟಾದ, ಹಸಿರಿನಿಂದ ಕಂಗೊಳಿಸುವ ಶಾಲಾ ಆವರಣವು ಆಕರ್ಷಕವಾಗಿದೆ.

ಧರ್ಮಪಾಲ : ಒಂದು ಕಿರು ಪರಿಚಯ

ಧರ್ಮಪಾಲ ಅವರು ಕಲಬುರ್ಗಿ ಜಿಲ್ಲೆಯ ಸೇಡಂನಲ್ಲಿರುವ ರಾಜೋಳ(K)ದ, ಹಿರಿಯ ಪ್ರಾಥಮಿಕ ಶಾಲೆಯಲ್ಲಿ (GHPS) ಕೆಲಸ ಮಾಡುತ್ತಿರುವ ಒಬ್ಬ TGT (Trained Graduate Teacher). ಅಂದರೆ ತರಬೇತಿ ಹೊಂದಿರುವ ಪದವೀಧರ ಶಿಕ್ಷಕರು. ಅವರು ತುಮಕೂರಿನಲ್ಲಿ DEd ಹಾಗೂ ಕುವೆಂಪು ವಿಶ್ವವಿದ್ಯಾನಿಲಯದಿಂದ BSc ಪದವಿ ಅಧ್ಯಯನವನ್ನು ಮುಗಿಸಿದ ನಂತರ 2010 ರಲ್ಲಿ ಈ ಶಾಲೆಯನ್ನು ಸೇರಿದರು.ಅವರು ದೂರಶಿಕ್ಷಣದ ಮೂಲಕ ಕುವೆಂಪು ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ MSc ಪದವಿ ಮುಗಿಸಿದರು. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆಗಳ ಕೇಂದ್ರವು (Center for Scientific and Industrial Research-CSIR) ನಡೆಸುವ ಭೌತಶಾಸ್ತ್ರದಲ್ಲಿನ ಶಿಷ್ಯವೇತನ ಪರೀಕ್ಷೆಗೆ (Fellowship

Examination) ಕೂಡ ಅರ್ಹತೆ ಪಡೆದಿದ್ದಾರೆ ಹಾಗೆಯೇ ಥರ್ಮೋಡೈನಮಿಕ್ಸ್‌ನಲ್ಲಿ ಸಂಶೋಧನೆ (PhD) ಮಾಡುವ ಉದ್ದೇಶವನ್ನು ಹೊಂದಿದ್ದಾರೆ.

ಧರ್ಮಪಾಲ ಅವರು ತುಮಕೂರು ಮೂಲದವರು. ಕಲಬುರ್ಗಿಯಲ್ಲಿ ಉದ್ಯೋಗಕ್ಕೆ ಸೇರಿದಾಗ ತನ್ನ ಪ್ರದೇಶಕ್ಕೆ ಹೋಲಿಸಿದರೆ ಇದು ಹತ್ತು ವರ್ಷಕ್ಕೂ ಹಿಂದಿದೆ ಎಂದು ಅವರಿಗೆ ಅನ್ನಿಸಿತು. ಅವರ ಲೆಕ್ಕಾಚಾರದ ಪ್ರಕಾರ, ಅವರ ಊರಲ್ಲಿ, ಪ್ರತೀ 1000 ದಾಖಲಾತಿಗಳಿಗೆ 10 ವಿದ್ಯಾರ್ಥಿಗಳು ಶಾಲೆಯನ್ನು ಮಧ್ಯದಲ್ಲಿಯೇ ಬಿಟ್ಟು ಹೋಗುತ್ತಾರೆ. ಆದರೆ ಅವರು ಕೆಲಸ ಮಾಡುತ್ತಿರುವ ರಾಜೋಳದಲ್ಲಿ 185 ದಾಖಲಾತಿ ಇದ್ದರೂ 55 ವಿದ್ಯಾರ್ಥಿಗಳಷ್ಟೇ ನಿಯಮಿತವಾಗಿ ಶಾಲೆಗೆ ಬರುತ್ತಿದ್ದರು. ಇದಕ್ಕೆ ಕಾರಣ, ವಿದ್ಯಾರ್ಥಿಗಳ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಲು ಶಿಕ್ಷಕರಲ್ಲಿದ್ದ ಭಯ. ಸಮುದಾಯವು ಆರ್ಥಿಕವಾಗಿ ಸ್ಥಿತಿವಂತರಾಗಿದ್ದರೂ ಜನರು ಶಾಲೆಯೊಡನೆ ತೊಡಗಿಸಿಕೊಳ್ಳಲು ಉತ್ಸುಕರಾಗಿಲ್ಲ ಎಂಬುದೂ ಅವರಿಗೆ ಮನದಟ್ಟಾಯಿತು. ಇದು ಒಂದಕ್ಕೊಂದು ತದ್ವಿರುದ್ಧವಾಗಿದ್ದರೂ ವಾಸ್ತವಿಕ ಸಂಗತಿಯಾಗಿತ್ತು.

ತಮ್ಮ ಮಕ್ಕಳ ಶಿಕ್ಷಣದ ಕುರಿತು ಸಮುದಾಯ ತೋರುತ್ತಿದ್ದ ನಿರಾಸಕ್ತಿಯು ವಿದ್ಯಾರ್ಥಿಗಳ ಕಲಿಕೆಯ ಮಟ್ಟದಲ್ಲಿ ಬಿಂಬಿಸುತ್ತಿತ್ತು. ಬಹುತೇಕ ಅರ್ಧದಷ್ಟು ವಿದ್ಯಾರ್ಥಿಗಳ ಮಾತೃಭಾಷೆ ತೆಲುಗು ಆಗಿದ್ದರಿಂದ ಅವರಿಗೆ ಕನ್ನಡವನ್ನು ಓದುವುದು ಹಾಗೂ ಬರೆಯುವುದು ಒಂದು ದೊಡ್ಡ ಸವಾಲಾಗಿತ್ತು. ಗ್ರೇಡ್‌ 7 ನ್ನು ಮುಗಿಸುವ ವಿದ್ಯಾರ್ಥಿಗಳ ಓದು ಮತ್ತು ಬರೆಹ ನಿರರ್ಗಳವಾಗಿರಲಿಲ್ಲ. ಗಣಿತ ಮತ್ತು ವಿಜ್ಞಾನದ ಕುರಿತು ಅವರಿಗೆ ಭಯವಿತ್ತು. ಹಾಗಾಗಿ, ಅಕ್ಕಪಕ್ಕದ ಊರುಗಳ ಮಾಧ್ಯಮಿಕ ಶಾಲೆಗಳಲ್ಲಿ ದಾಖಲಾತಿ ಪಡೆಯಲು ಅವರು ವಿಫಲರಾದರೆ ಆಶ್ಚರ್ಯವೇನಿರಲಿಲ್ಲ.

ಪರಿಸ್ಥಿತಿ ಬದಲಾಯಿಸಲು ಸಿದ್ಧತೆ:

ಯಾವುದೇ ಬದಲಾವಣೆಯು ಆಗಬೇಕಾದರೆ ಕೂಲಂಕಷ ಪರಿಶೀಲನೆ ಅಗತ್ಯ ಎಂಬುದನ್ನು ಅವರು ಮನಗಂಡರು. ಶಾಲೆ ಹಾಗೂ ಶಿಕ್ಷಣವನ್ನು ಕುರಿತ ಸಮುದಾಯದ ನಿರಾಸಕ್ತಿ ಬಹಳ ಸಮಯದಿಂದಲೂ ಅಸ್ತಿತ್ವದಲ್ಲಿ ಇತ್ತು. ಶಿಕ್ಷಕರೂ ಶಾಲೆಯಲ್ಲಿ ಬಹಳ ವರ್ಷಗಳಿಂದ ಇದ್ದರು. ಯಾವುದೇ ಬದಲಾವಣೆಯನ್ನು ಸಮುದಾಯವಾಗಲೀ ಇನ್ನಿತರ ಶಿಕ್ಷಕರಾಗಲೀ ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದು ಸಾಧ್ಯವಿರಲಿಲ್ಲ.

2012 ರಲ್ಲಿ ಮೂವರು ಶಿಕ್ಷಕರನ್ನು ಶಾಲೆಯಿಂದ ವರ್ಗಾಯಿಸಲಾಯಿತು. ಉಳಿದ ಮೂವರಲ್ಲಿ, ಶಾಲೆಯಲ್ಲಿ ನಿಭಾಯಿಸಲೇಬೇಕಾದ ಇನ್ನಿತರ ಹಲವಾರು ಜವಾಬ್ದಾರಿಗಳ ಕಾರಣ, ನಿರ್ದಿಷ್ಟವಾದ ಯಾವುದೇ ಸಮಯದಲ್ಲಿ ಇಬ್ಬರು ಶಿಕ್ಷಕರಷ್ಟೇ ಬೋಧನೆಗೆ ಲಭ್ಯವಾಗುತ್ತಿದ್ದರು. ಇದೊಂದು ಸವಾಲೇ ಆಗಿದ್ದರೂ ಕೂಡ ಧರ್ಮಪಾಲ ಅವರು ಇದರಲ್ಲಿ ಅವಕಾಶವೊಂದನ್ನು ಕಂಡರು. ಅವರು ಶಾಲಾ ಶಿಕ್ಷಣದ ಏಳೂ ವರ್ಷಗಳವರೆಗೆ ಗ್ರೇಡಿನಿಂದ ಗ್ರೇಡಿಗೆ ಅದೇ ವಿದ್ಯಾರ್ಥಿಗಳ ಗುಂಪಿಗೆ ಪಾಠ ಬೋಧಿಸುತ್ತಾ ಮುಂದುವರೆಯುವ ಯೋಜನೆಯೊಡನೆ ಕೆಳಗಿನ ತರಗತಿಗಳಿಗೆ ಬೋಧಿಸಲು ಆರಂಭಿಸಿದರು. ಒಮ್ಮೆ ಏನಾದರೂ ಸುಧಾರಣೆಗಳನ್ನು ತಂದರೆ ಸಮುದಾಯವನ್ನು ತೊಡಗಿಸುವುದು ಸುಲಭ ಎಂಬುದು ಅವರ ನಂಬಿಕೆಯಾಗಿತ್ತು. ಅವರು ಇನ್ನಿಬ್ಬರು ಶಿಕ್ಷಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡರು. ಅವರು ಅದೇ ವಿದ್ಯಾರ್ಥಿತಂಡಕ್ಕೆ ಬೋಧಿಸುತ್ತಾ ಮುಂದುವರಿದಾಗ ಆ ಏಳು ವರ್ಷಗಳ ಅವಧಿಯಲ್ಲಿ ಏನಾಗಿರಬಹುದು ಎಂಬುದನ್ನು ಊಹಿಸಲು ಹಾಗೂ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ನಾವು ಸದ್ಯದ ಗ್ರೇಡ್‌ 7 ತರಗತಿ ಕೋಣೆಯಲ್ಲಿ ಏನು ಆಗುತ್ತದೆ ಎಂಬುದನ್ನು ಗಮನಿಸುವ ಅಗತ್ಯವಿದೆ.

ವಿದ್ಯಾರ್ಥಿ-ಕೇಂದ್ರಿತ ಬೋಧನಾಕ್ರಮ ಆಚರಣೆಗಳು:

ಗ್ರೇಡ್‌ 7 ರ ವಿದ್ಯಾರ್ಥಿಗಳು ವಿಚಾರ ಗೋಷ್ಠಿಯೊಂದಕ್ಕೆ ನಡೆಸುತ್ತಿದ್ದ ಸಿದ್ಧತೆಯಲ್ಲಿ ನಿರತರಾಗಿದ್ದರು. ಅವರು, ‘ಮಾಲಿನ್ಯ’ ಎಂಬ ವಿಷಯದ ಕುರಿತಾಗಿ ವಿಷಯಮಂಡನೆ ಮಾಡುವವರಿದ್ದರು. ಅದನ್ನು ಮಂಡಿಸಲಿದ್ದ ಗುಂಪಿನ ಎಂಟು ಸದಸ್ಯರು ಮಾಲಿನ್ಯಕಾರಕಗಳು, ಮಾಲಿನ್ಯದ ವಿಧಗಳು, ಮಾಲಿನ್ಯವನ್ನು ಕಡಿಮೆ ಮಾಡುವ ಕ್ರಮಗಳು ಇತ್ಯಾದಿ ಹಲವಾರು ವಿಷಯಗಳ ಕುರಿತಾಗಿ ಒಬ್ಬರಾದ ಮೇಲೆ ಒಬ್ಬರಂತೆ ಮಾತನಾಡಿದರು. 15 ನಿಮಿಷ ಅವಧಿಯ ಮಂಡನೆಯಲ್ಲಿ ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಹೊಂದಿದ್ದರು ಹಾಗೂ ಮಂಡಿಸಲಿರುವ ವಿಷಯ ಮತ್ತು ಅನುಕ್ರಮಣಿಕೆಯ ಬಗ್ಗೆ ಚೆನ್ನಾಗಿ ತಾಲೀಮು ಮಾಡಿಕೊಂಡಿದ್ದಂತೆ ಕಾಣುತ್ತಿತ್ತು. ಮಾಹಿತಿಯನ್ನು ಕಲೆಹಾಕಲು ಅವರು ಹಲವಾರು ಮೂಲಗಳನ್ನು ಪರಾಮರ್ಶಿಸಿದ್ದರು. ಉಪಯೋಗಿಸಿದ ಭಿತ್ತಿಚಿತ್ರಗಳು ಅವುಗಳ ಸಿದ್ಧತೆಗೆ ವಿದ್ಯಾರ್ಥಿಗಳು ಗುಂಪಿನಲ್ಲಿ ಕೆಲಸ ಮಾಡಿದ್ದಾರೆ ಎನ್ನುವುದನ್ನು ಸೂಚಿಸುತ್ತಿದ್ದವು.

ಶಿಕ್ಷಕರು ಉಪಯೋಗಿಸಿದ ಶಿಕ್ಷಣದ ವಿಶಾಲ ಕಾರ್ಯತಂತ್ರದ ಭಾಗವಾಗಿ ವಿದ್ಯಾರ್ಥಿಗಳು ಪ್ರತೀ ತಿಂಗಳು ಒಂದು ವಿಚಾರ ಗೋಷ್ಠಿಯನ್ನು ನಡೆಸುತ್ತಿದ್ದರು. ಧರ್ಮಪಾಲ ಅವರು ಒಂದು ವಿಷಯವನ್ನು ವಿದ್ಯಾರ್ಥಿಗಳಿಗೆ ಇರುವ ಸ್ವ-ಕಲಿಕೆಯ ಅವಕಾಶಗಳ ಆಧಾರದ ಮೇಲೆ ಕಠಿಣ, ಸಾಧಾರಣ ಹಾಗೂ ಸುಲಭ ಎಂದು ಮೂರು ಮಟ್ಟದಲ್ಲಿ ಗುರುತಿಸುತ್ತಾರೆ. ‘ಮಾಲಿನ್ಯ’ ಎಂಬ ವಿಷಯವನ್ನು ಸಾಧಾರಣ ವಿಷಯ ಎಂದು ಪರಿಗಣಿಸಲಾಗಿತ್ತು. ಅದರರ್ಥ, ಕಲಿಕೆಯನ್ನು ಪೂರ್ಣಗೊಳಿಸುವುದಕ್ಕಾಗಿ ವಿದ್ಯಾರ್ಥಿಗಳು ಅಗತ್ಯವಿದ್ದ ಎಲ್ಲ ಮಾಹಿತಿಗಳನ್ನು ಒಗ್ಗೂಡಿಸಲು ಕೆಲವು ಕೆಲಸಗಳನ್ನು ಮಾಡಬೇಕಿತ್ತು. ದುರ್ಲಭವಾದ ಮೂಲಗಳನ್ನು ಪರಾಮರ್ಶಿಬೇಕಾದ ಅಗತ್ಯವಿರುವ ‘ಕೋವ್ಯಾಲನ್ಸೀಯ ಬಂಧ’ (Covalent bond) ದಂತಹ ವಿಷಯಗಳನ್ನು ವಿಚಾರ ಗೋಷ್ಠಿಗಳಿಗೆ ನೀಡುವುದಿಲ್ಲ. ಆದರೆ ಶಿಕ್ಷಕರು ಅವುಗಳನ್ನು ನೇರವಾಗಿ ಕಲಿಸುತ್ತಾರೆ. ಸುಲಭವಾದ ವಿಷಯಗಳನ್ನು ಸ್ವ-ಕಲಿಕೆಗೆ ಬಿಡಲಾಗುತ್ತದೆ. ಧರ್ಮಪಾಲ ಅವರು ವಿಷಯ ಮತ್ತು ಕಲಿಕೆಯ ವಿಧಾನಗಳನ್ನು ಗುರುತಿಸಿ, ಅವುಗಳಿಗೆ ಮುಂಚಿತವಾಗಿಯೇ ವೇಳಾಪಟ್ಟಿಯೊಂದನ್ನು ತಯಾರಿಸುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ಪಾತ್ರವನ್ನು ಅರ್ಥಮಾಡಿಕೊಂಡು ಸಿದ್ಧರಾಗಲು ಸಾಕಷ್ಟು ಸಮಯಾವಕಾಶ ಸಿಗುತ್ತದೆ.

ನಿಗದಿತ ಚಟುವಟಿಕೆಗಳನ್ನು ಕಾರ್ಯಗತಗೊಳಿಸುವಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಗುಂಪಿನ ಒಳಗೇ ಅವರು ವಿಷಯದ ಬೇರೆ ಬೇರೆ ಅಂಶಗಳನ್ನು ಹಂಚಿಕೊಂಡು ಸಿದ್ಧರಾಗುತ್ತಾರೆ ಹಾಗೂ ಮಂಡನೆಯ ತಾಲೀಮು ನಡೆಸುತ್ತಾರೆ. ಶಿಕ್ಷಕರ ಸಂಖ್ಯೆ ಕಡಿಮೆ ಇರುವುದರಿಂದ ಅವರ ಹಲವಾರು ತರಗತಿಗಳಿಗೆ ಶಿಕ್ಷಕರಿರುವುದಿಲ್ಲ ಹಾಗೂ ವಿದ್ಯಾರ್ಥಿಗಳು ವಿಚಾರ ಗೋಷ್ಠಿಗಳನ್ನು ಮತ್ತು ಗುಂಪು ಚರ್ಚೆಗಳನ್ನು ತಾವೇ ಸ್ವಇಚ್ಛೆಯಿಂದ ಆಯೋಜಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಮಂಡನೆಗಳನ್ನು ಪ್ರಸ್ತುತಪಡಿಸುವಾಗ ಶಿಕ್ಷಕರು ಉಸ್ತುವಾರಿ ನೋಡುವಂತೆ ಆ ಮೂಲಕ ಒಳನೋಟಗಳನ್ನುಳ್ಳ ಹಿಮ್ಮಾಹಿತಿಯನ್ನು ನೀಡುವಂತೆ ಅವರಿಗೆ ತಿಳಿಸಿರುತ್ತಾರೆ. ಇವುಗಳಲ್ಲಿ ಬಹುತೇಕ ಚಟುವಟಿಕೆಗಳು ಸಭಾಗೃಹದಲ್ಲಿಯೇ ನಡೆಯುತ್ತವೆ.

Equipment in the Seminar Hall

ಸಭಾಗೃಹದಲ್ಲಿರುವ ಪ್ರೊಜೆಕ್ಟರ್‌ ಕಂಪ್ಯೂಟರೊಂದರ CPU ಗೆ ಸಂಪರ್ಕಿಸಲ್ಪಟ್ಟಿದೆ. ಧರ್ಮಪಾಲ ಅವರು ಅಗತ್ಯವಿದ್ದ ಯಂತ್ರಾಂಶಗಳನ್ನು (hardware) ಕೊಂಡುತಂದು CPU ವನ್ನು ತಾವೇ ತಯಾರಿಸಿದ್ದಾರೆ. ಇದರಿಂದ ಶಾಲೆಗೆ ಅದು ಕೈಗೆಟುಕುವಂತಾಯಿತು.

ಧರ್ಮಪಾಲ ಅವರು ವಿಜ್ಞಾನ ಸಂಪನ್ಮೂಲ ಕೊಠಡಿಯೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಅದರಲ್ಲಿ ವಿಜ್ಞಾನದ ಪ್ರಯೋಗಗಳನ್ನು ನಡೆಸಲು ಅಗತ್ಯವಾದ ಹಲವಾರು ಪ್ರಯೋಗಾಲಯ ಉಪಕರಣಗಳಿವೆ. ವಿದ್ಯುತ್‌ ಮಂಡಲಗಳು (electric circuits) ಮತ್ತು LED ದೀಪಗಳಂತಹ ಸಾಮಾನ್ಯವಾಗಿ ಲಭ್ಯವಿರುವ ಸಾಮಗ್ರಿಗಳನ್ನು ಉಪಯೋಗಿಸಿ, ಕಡಿಮೆ ಖರ್ಚಿನಲ್ಲಿ ಅಥವಾ ಏನೂ ವೆಚ್ಚವೇ ಇಲ್ಲದೇ ಅಭಿವೃದ್ಧಿಪಡಿಸಲಾದ ಅನೇಕ ಸ್ವಯಂಸ್ಪೂರ್ತಿಯಿಂದ ತಯಾರಿಸಿದ ವೈಜ್ಞಾನಿಕ ಉಪಕರಣಗಳಿವೆ. ಈ ಪ್ರಯೋಗಾಲಯವನ್ನು ನಡೆಸಲು ಅಜೀಂ ಪ್ರೇಮ್‌ಜಿ ಫೌಂಡೇಶನ್‌ ನೀಡುತ್ತಿರುವ ನೆರವು ಅಪರಿಮಿತವಾದುದು ಎಂದು ಧರ್ಮಪಾಲ ಅವರು ಹೇಳುತ್ತಾರೆ. ಅದಿಲ್ಲದಿದ್ದರೆ ಪ್ರಯೋಗ ಹಾಗೂ ಪ್ರಾತ್ಯಕ್ಷಿಕೆಗಳನ್ನು ನಡೆಸಲು ಅತ್ಯಗತ್ಯವಾಗಿರುವ, ಪ್ರಯೋಗಾಲಯದಲ್ಲಿ ಬಳಸುವ ರಾಸಾಯನಿಕಗಳನ್ನು ಕೊಳ್ಳುವುದು ಕಷ್ಟವಾಗುತ್ತಿತ್ತು. ಅವರು ಶಿಕ್ಷಕ ಕಲಿಕೆಯ ಕೇಂದ್ರದ (Teacher Learning Center – TLC) ಸಂಪನ್ಮೂಲಗಳನ್ನು ತರಗತಿಯಲ್ಲಿ ಬೋಧಿಸಲು ಬಳಸುತ್ತಿದ್ದಾರೆ. ಯಿಂದ, ಬೋಧನೆಯ ಅಂಗವಾಗಿ ತಮ್ಮ ವಿದ್ಯಾರ್ಥಿಗಳಿಗೆ ವೀಡಿಯೋಗಳನ್ನು ತೋರಿಸಲು ಬೇಕಾದಾಗಲೆಲ್ಲ LCD ಪ್ರೊಜೆಕ್ಟರ್‌ನ್ನು TLC ಯು ಅವರಿಗೆ ಅವರ ಹೆಸರಿಗೆ ಎರವಲು ನೀಡುತ್ತದೆ.

Glimpses of Science Laboratory and Resource Room

ಪ್ರಯೋಗಾಲಯವನ್ನು ಬೆಳಕಿಗೆ ಸಂಬಂಧಿಸಿದ ಪ್ರಯೋಗ ಮತ್ತು ಪ್ರಾತ್ಯಕ್ಷಿಕೆಗಳಿಗಾಗಿ ಕತ್ತಲೆಕೋಣೆಯನ್ನಾಗಿಯೂ ಬಳಸಲಾಗುತ್ತದೆ. ವಿದ್ಯಾರ್ಥಿಗಳು ಅವುಗಳನ್ನು ಗುರುತಿಸಲು ಅನುಕೂಲವಾಗುವಂತೆ ನಕ್ಷತ್ರ ಮತ್ತು ನಕ್ಷತ್ರಪುಂಜಗಳ ಮೆರಗು ಅಂಟುಪಟ್ಟಿಗಳನ್ನು (ಫ್ಲೋರೋಸೆಂಟ್‌ ಸ್ಟಿಕ್ಕರ್‌)ಗಳನ್ನು ಕೋಣೆಯ ಛಾವಣಿಗೆ ಅಂಟಿಸಲಾಗಿದೆ. ಪ್ರಯೋಗಾಲಯದಲ್ಲಿರುವ ಕಪ್ಪು ಹಲಗೆಯಲ್ಲಿ ಬೆಳಕಿನ ವಿವಿಧ ಮೂಲಗಳ ಉದಾಹರಣೆಗಳನ್ನು ಪಟ್ಟಿ ಮಾಡುವ ಉತ್ತಮ ಕಾರ್ಯತಂತ್ರವನ್ನು ಪ್ರದರ್ಶಿಸಲಾಗಿದೆ. ಈ ಜ್ಞಾನವನ್ನು ಆಧಾರವಾಗಿಟ್ಟುಕೊಂಡು ಬೆಳಕಿನ ನೈಸರ್ಗಿಕ ಹಾಗೂ ಕೃತಕ ಮೂಲಗಳನ್ನು ಅರ್ಥೈಸಿಕೊಳ್ಳಲು ವಿದ್ಯಾರ್ಥಿಗಳಿಗೆ ಇದು ಅನುವು ಮಾಡಿಕೊಡುತ್ತದೆ.

Blackboard displaying organized and selective use of examples for student engagement.

ವಿಚಾರ ಗೋಷ್ಠಿಗಳಲ್ಲದೇ ವಿದ್ಯಾರ್ಥಿಗಳು ಗುಂಪು ಚರ್ಚೆ, ಕಾರ್ಯಯೋಜನೆಗಳು ಹಾಗೂ ತಮ್ಮ ಪಠ್ಯಪುಸ್ತಕಗಳಲ್ಲಿ ಇರುವ ವಿಷಯಕ್ಕೆ ಸಂಬಂಧಿಸಿದಂತೆ ಇರುವ ಮಾದರಿಗಳು ಇತ್ಯಾದಿ ಇನ್ನೂ ಅನೇಕ ತರಹದ ಕಲಿಕೆಯ ವಿಧಾನಗಳಲ್ಲಿ ನಿರತರಾಗುತ್ತಾರೆ. ಈ ಪ್ರತಿಯೊಂದು ವಿಧಾನಗಳಲ್ಲಿಯೂ ಅವರು ತರಗತಿ ಕೋಣೆಯಲ್ಲಿನ ಬೋಧನೆಯನ್ನು ಅವಲಂಬಿಸುವುದರ ಬದಲಾಗಿ ತಾವೇ ಕಲಿಯುವುದರಲ್ಲಿ ಮುನ್ನಡೆಯುತ್ತಾರೆ.

ತರಗತಿ ಕೋಣೆಯಿಂದಾಚೆಯೂ ಕಲಿಕೆಯನ್ನು ಶಾಲಾ ಆವರಣದಲ್ಲಿ ಅಕ್ಷರಶಃ ಎಲ್ಲೆಡೆ ಕಾಣಬಹುದು. ಸಾಧ್ಯವಿರುವ ಎಲ್ಲಾ ಜಾಗಗಳಲ್ಲಿಯೂ ಶಾಲೆಯು ವಿದ್ಯಾರ್ಥಿಗಳಿಗೆ ಕಲಿಕೆಯ ಸಂಪನ್ಮೂಲಗಳು ಲಭ್ಯವಿರುವಂತೆ ಮಾಡಿದೆ. ಕನ್ನಡ ಕಲಿಕೆಯ ಸಂಪನ್ಮೂಲ ಸಂಗ್ರಹವೊಂದನ್ನು ಆವಾರದ ಬಳಿ ನೋಡಬಹುದು. ವಿದ್ಯಾರ್ಥಿಗಳು ತರಗತಿ ಮುಗಿದ ಬಳಿಕ ಇವುಗಳನ್ನು ಒಂದು ಗಂಟೆಯ ಕಾಲ ಓದುವಂತೆ ಪ್ರೋತ್ಸಾಹಿಸಲಾಗುತ್ತದೆ. ಈಪ್ರಯತ್ನವನ್ನು ಧರ್ಮಪಾಲ ಅವರು ‘ಆಪರೇಷನ್‌ ಅರ್ಜುನ’ ಎಂದು ಹೆಸರಿಸಿದ್ದಾರೆ. ಇದೆಲ್ಲವನ್ನು ವಿದ್ಯಾರ್ಥಿಗಳು ಎದುರಿಸುತ್ತಿದ್ದ ಭಾಷಾ ಕಲಿಕೆಯ ಸಮಸ್ಯೆಯನ್ನು ನಿವಾರಿಸಲು ಮಾಡಲಾಗಿದೆ. ಭಾಷಾಕಲಿಕೆಯ ಅಂಗಗಳಾದ ಆಲಿಸುವಿಕೆ, ಮಾತನಾಡುವಿಕೆ, ಓದು ಹಾಗೂ ಬರಹಗಳ (Listening, Speaking, Reading and Writing – LSRW) ಮೇಲೆ ಗಮನವನ್ನು ಕೇಂದ್ರೀಕರಿಸುವ ನಿಟ್ಟಿನಲ್ಲಿ ಮಿಶ್ರ ಸಾಮರ್ಥ್ಯವಿರುವ ವಿದ್ಯಾರ್ಥಿಗಳ ಗುಂಪನ್ನು ರಚಿಸಲಾಗಿದೆ. ಎರಡು ವರ್ಷಗಳ ಕಾಲ ಪ್ರತೀ ಶನಿವಾರ ಕಥೆ ಹೇಳುವುದನ್ನು ನಡೆಸಿಕೊಂಡು ಬರಲಾಗಿದೆ. ಪ್ರತೀ ವಾರ ಹತ್ತು ವಿದ್ಯಾರ್ಥಿಗಳಿಗೆ ಎಲ್ಲರೂ ಬೆಳಗಿನ ಪ್ರಾರ್ಥನೆಗೆ ಒಟ್ಟು ಸೇರುವ ಅವಧಿಯಲ್ಲಿ ಮಾತನಾಡುವ ಅವಕಾಶವನ್ನು ನೀಡಲಾಗುತ್ತದೆ.

ಶಾಲೆಯು ಪರಿಸರ-ಸ್ನೇಹಿ ನೀತಿಯೊಂದನ್ನು ಕೂಡ ಹೊಂದಿದೆ. ಶಾಲೆಯ ಆವರಣದಲ್ಲಿ, ಬಳಕೆಯಾಗದ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಎಲ್ಲಿಯೂ ಕಾಣಲಾಗದು. ಒಳಬಂದ ಯಾವುದೇ ಪ್ಲಾಸ್ಟಿಕ್‌ ವಸ್ತುವನ್ನು ಸೃಜನಾತ್ಮಕ ರೀತಿಯಲ್ಲಿ ಮರುಬಳಕೆ ಮಾಡಲಾಗುತ್ತದೆ. ನೀರಿನ ಬಾಟಲಿಗಳನ್ನು ಗಿಡ ಬೆಳೆಸುವುದಕ್ಕಾಗಿ ಬಳಸುತ್ತಿರುವುದು ಒಂದು ಒಳ್ಳೆಯ ಉದಾಹರಣೆ.

ಧರ್ಮಪಾಲ, ಈ ಎಲ್ಲ ಚಟುವಟಿಕೆಗಳನ್ನು ನಡೆಸಲು ಅವರಿಗೆ ಸ್ಫೂರ್ತಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು (NCF) ಅವರು ಅರ್ಥ ಮಾಡಿಕೊಂಡದ್ದರಿಂದ. ಮಕ್ಕಳು ಜ್ಞಾನನಿರ್ಮಾಣ ಪ್ರಕ್ರಿಯೆಯ ಕೇಂದ್ರದಲ್ಲಿರುವುದು-ಪ್ರಪಂಚವನ್ನು ಹೇಗೆ ಅರ್ಥೈಸಿಕೊಳ್ಳುತ್ತಾರೆ ಎಂಬುದನ್ನು ಪರಿಗಣಿಸುವುದು-ಅನುಕ್ರಮವಲ್ಲದ ಕಲಿಕೆಯಲ್ಲಿ ತೊಡಗುವುದು ಇವು ಅವರು ಉಲ್ಲೇಖಿಸಿದ ಕೆಲವು NCF ತತ್ತ್ವಗಳು. ಇದನ್ನು ವಿಶದೀಕರಿಸಲು ಅವರು ತಮ್ಮ ವಿದ್ಯಾರ್ಥಿಗಳು ಹೂವಿನ ರಚನೆಯನ್ನು ಹೇಗೆ ಕಲಿತರು ಎನ್ನುವ ಉದಾಹರಣೆಯನ್ನು ಕೊಟ್ಟರು. ಪಠ್ಯಪುಸ್ತಕದ ಭಾಷೆಯಲ್ಲಿ ಅಲ್ಲದಿದ್ದರೂ ವಿದ್ಯಾರ್ಥಿಗಳಿಗೆ ಹೂವಿನ ಬಗ್ಗೆ ಜ್ಞಾನ ಇದೆ ಎಂಬುದು ಅವರು ಚಿಂತನೆ. ತರಗತಿಯು ಅವರು ಹೂವುಗಳನ್ನು ನೋಡಿದ ಹಾಗೂ ಅವುಗಳೊಂದಿಗೆ ಆಟವಾಡಿದ ಅನುಭವವನ್ನು ಒಳತರಬೇಕಾಗುತ್ತದೆ. ತರಗತಿಯಲ್ಲಿ ಇಂತಹ ಅನೇಕ ಅನುಭವಗಳನ್ನು ಔಪಚಾರಿಕವಾಗಿ, ಸಂಘಟಿತ ರೂಪದಲ್ಲಿ ಮಂಡಿಸಬೇಕು ತನ್ಮೂಲಕ ವಿಷಯದಿಂದ ನಿರೀಕ್ಷಿಸಲಾದ ಅರ್ಥವನ್ನು ಮನಗಾಣಿಸಬೇಕು. ಮಕ್ಕಳು ಈ ಶಿಶು-ಕೇಂದ್ರಿತ ವಿಧಾನಗಳ ಮೂಲಕ ಮಕ್ಕಳು ವಿಷಯದ ತಿರುಳನ್ನು ಕಲಿಯುವುದಷ್ಟೇ ಅಲ್ಲ, ಆತ್ಮವಿಶ್ವಾಸವನ್ನೂ ಬೆಳೆಸಿಕೊಳ್ಳುತ್ತಾರೆ ಎಂದು ಧರ್ಮಪಾಲ ಅವರು ನಂಬಿದ್ದಾರೆ. ಅವರ ಪ್ರಕಾರ ನಾವು ಪ್ರತಿಯೊಂದು ಮಗುವಿನಲ್ಲಿಯೂ ಬೆಳೆಸಬೇಕಾದ ಅತಿಮುಖ್ಯ ಅಂಶವೆಂದರೆ ಇದೇ. ಅವರು ಅಳವಡಿಸಿಕೊಳ್ಳುವ ವಿವಿಧ ರೀತಿಯ ಬೋಧನಾಕ್ರಮಗಳು ಅವರನ್ನು ಪೂರ್ಣಾವಧಿ ಪಾಠ ಹೇಳಿಕೊಡುವವರಾಗುವದರಿಂದ ಮುಕ್ತವಾಗಿಸುತ್ತವೆ, ಬದಲಾಗಿ ಅವರ ಪಾತ್ರವು ಒಬ್ಬ ಮಾರ್ಗದರ್ಶಕನದಾಗಿರುತ್ತದೆ ಎಂದು ಅವರು ನಂಬುತ್ತಾರೆ.

ನಿಪುಣ ಸಂಪನ್ಮೂಲ ವ್ಯಕ್ತಿ:

ಧರ್ಮಪಾಲ ಅವರು ಫೌಂಡೇಷನ್‌ ಒದಗಿಸಿರುವ TLC ಯಲ್ಲಿ ನಿಯತವಾಗಿ ಭಾಗವಹಿಸುತ್ತಾರೆ. ಮೊದಮೊದಲಿಗೆ ಅವರು ಅದರಲ್ಲಿ ಭಾಗವಹಿಸುವವರಲ್ಲಿ ಒಬ್ಬರಾಗಿದ್ದರು. ಆದರೆ ಗೋಷ್ಠಿ ಮತ್ತು ಕಾರ್ಯಾಗಾರಗಳಲ್ಲಿನ ಅವರ ಮಾತುಕತೆ, ಕೇಳುವ ಪ್ರಶ್ನೆಗಳು ಹಾಗೂ ಕೊಡುಗೆಗಳ ಕಾರಣದಿಂದ ಶೀಘ್ರವಾಗಿ ಅವರೊಬ್ಬ ಸಂಪನ್ಮೂಲ ವ್ಯಕ್ತಿಯಾದರು. ಶಿಕ್ಷಕ ಅಭಿವೃದ್ಧಿ ಉಪಕ್ರಮಗಳ ಭಾಗವಾಗಿ ಅವರು ಆ ಬ್ಲಾಕ್‌ನಲ್ಲಿರುವ ಶಿಕ್ಷಕರಿಗೆ ಕಾರ್ಯಾಗಾರಗಳನ್ನು ಆಯೋಜಿಸುತ್ತಾರೆ. ಹಲವಾರು ಶಿಕ್ಷಕರಿಗೆ ತಾವು ಕಲಿಸುವ ವಿಷಯದ ಕುರಿತಾಗಿ ತಪ್ಪುಕಲ್ಪನೆಗಳಿದ್ದು ಈ ಕಮ್ಮಟ/ ಕಾರ್ಯಾಗಾರಗಳ ಮೂಲಕವಷ್ಟೇ ಅವರಲ್ಲಿ ಸರಿಯಾದ ತಿಳುವಳಿಕೆಯು ಮೂಡಲು ಸಾಧ್ಯ ಎಂಬುದನ್ನು ಹಾಗೂ ಶಿಕ್ಷಕರನ್ನು ಒಂದೆಡೆ ತರುವ TLCಯಂತಹ ಸಂವಾದಾತ್ಮಕ ವೇದಿಕೆಗಳ ಮೌಲ್ಯವನ್ನು ಧರ್ಮಪಾಲ ಅವರು ಗುರುತಿಸುತ್ತಾರೆ. ಆಯ್ದ ಕೆಲವರಷ್ಟೇ ತಮ್ಮ ತರಗತಿ ಕೋಣೆಯಲ್ಲಿನ ಕಾರ್ಯವನ್ನು ಸುಧಾರಿಸಿಕೊಳ್ಳಲು ವೇದಿಕೆಯಿಂದ ಉಪಯೋಗ ಪಡೆದುಕೊಳ್ಳುವುದರಲ್ಲಿ ನಿಜಕ್ಕೂ ಆಸಕ್ತಿ ಹೊಂದಿರುತ್ತಾರೆ ಎಂದು ಅವರು ನಂಬಿರುತ್ತಾರೆ. ಅಗತ್ಯವಿದ್ದ ಮೂಲಭೂತ ಸಂಪನ್ಮೂಲಗಳನ್ನು ಒದಗಿಸುವುದರ ಮೂಲಕ ಹಾಗೂ ನಿರಂತರವಾಗಿ ಬೆಂಬಲವನ್ನು ನೀಡುವುದರ ಮೂಲಕ ಪ್ರಯೋಗಾಲಯವನ್ನು ಅಭಿವೃದ್ಧಿ ಪಡಿಸಲು ತಮಗೆ ನೆರವಾಗಿದೆ ಎಂದು ಅವರು ಫೌಂಡೇಷನ್‌ನ ಕೊಡುಗೆಯನ್ನು ನೆನೆಯುತ್ತಾರೆ. ತಮ್ಮ ಶಾಲೆ ಹಾಗೂ ಫೌಂಡೇಷನ್‌ ನಡುವಿನ ಅತ್ಯಂತ ಸಹಕಾರೀ ಸಂಬಂಧಕ್ಕೆ ತಮ್ಮ ಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ಉತ್ಸವವು ಒಳ್ಳೆಯ ಉದಾಹರಣೆ ಎಂದವರು ಉಲ್ಲೇಖಿಸುತ್ತಾರೆ.

ಧರ್ಮಪಾಲ ಅವರು ಕರ್ನಾಟಕದುದ್ದಕ್ಕೂ ಹಮ್ಮಿಕೊಂಡಿದ್ದ ಶಿಕ್ಷಕ ಅಭಿವೃದ್ಧಿ ಕಾರ್ಯಕ್ರಮಕ್ಕೆ (Teacher Professional Development- TDP) ನಿಪುಣ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಧರ್ಮಪಾಲರು ಆನ್‌ಲೈನ್‌ ಸಂಪನ್ಮೂಲಗಳೂ ಸೇರಿದಂತೆ, ತಮ್ಮ ವೃತ್ತಿಪರ ಅಭಿವೃದ್ಧಿಗೆ ದೊರೆಯುವ ಯಾವುದೇ ಅವಕಾಶವನ್ನೂ ತಪ್ಪಿಸಿಕೊಳ್ಳುವುದಿಲ್ಲ. ಇತ್ತೀಚೆಗೆ, ಅವರು BYJU ದವರು ಅಭಿವೃದ್ಧಿ ಪಡಿಸಿದ e-content ಗೆ ತಮ್ಮದೇ ವೈಯಕ್ತಿಕ ಖರ್ಚಿನಲ್ಲಿ ಚಂದಾದಾರರಾಗಿದ್ದಾರೆ. ತಾನೆ ವಿಷಯಗಳನ್ನುಅರ್ಥಮಾಡಿಕೊಳ್ಳಲು ಹಾಗೂ ತರಗತಿಯಲ್ಲಿ ಪ್ರಾತ್ಯಕ್ಷಿಕೆಗಳನ್ನು ತೋರಿಸಲು ವೀಡಿಯೋಗಳನ್ನು ಬಳಸುತ್ತಾರೆ. ವೃತ್ತಿಪರ ಕಲಿಕೆಗೆ ತಾನು ಪದೇ ಪದೇ ಬಳಸುವ Kahoot ಆಪ್‌ನ ಉದಾಹರಣೆಯನ್ನು ಅವರು ನೀಡುತ್ತಾರೆ.

ಸಮುದಾಯದೊಡನೆ ಸಂಬಂಧ:

ಧರ್ಮಪಾಲರಿಗೆ ಸಮುದಾಯದ ಜನರೊಡನೆ ತುಂಬಾ ಒಳ್ಳೆಯ ಸಂಬಂಧವಿದೆ, ಅವರ ಸತತ ಪ್ರಯತ್ನದಿಂದಾಗಿ ಸಮುದಾಯವು ಶಾಲಾವಿಷಯಗಳಲ್ಲಿ ಭಾಗವಹಿಸಲು ಆರಂಭಿಸಿದೆ. ಶಾಲೆ ಮತ್ತು ಕಲಿಕೆಗಳ ಕುರಿತು ಯಾವ ಕಾಳಜಿಯನ್ನೂ ಮಾಡದ ಸಮುದಾಯದ ಸದಸ್ಯರು ಶಾಲೆಗೆ ಬರತೊಡಗಿದ್ದಾರೆ. ಇದೆಲ್ಲವೂ ಆಗಿದ್ದು ಧರ್ಮಪಾಲರೂ ಸೇರಿದಂತೆ ಮೂವರು ಶಿಕ್ಷಕರು ರಜೆಯನ್ನೂ ಬಿಡದೇ ವಿದ್ಯಾರ್ಥಿಗಳನ್ನು ಪ್ರತಿ ದಿನ ಕಲಿಕೆಯ ಪ್ರಕ್ರಿಯೆಯಲ್ಲಿ ತೊಡಗಿಸಿದ್ದರಿಂದ. ಮಕ್ಕಳು ಶಾಲೆಗೆ ಬರುವುದನ್ನು ಇಷ್ಟಪಡತೊಡಗಿದರು. ಶಾಲೆಯು ಅವಕಾಶ ದೊರೆತಾಗಲೆಲ್ಲ ಅದನ್ನು ಸಮುದಾಯಕ್ಕೆ ತನ್ನ ಚಟುವಟಿಕೆಗಳನ್ನು ತೋರಿಸಲು ಬಳಸಿಕೊಂಡಿತು.

ಉದಾಹರಣೆಗೆ, ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವದ ದಿನ ಮಕ್ಕಳು ವಸತಿ ಪ್ರದೇಶಗಳಲ್ಲಿ ಹಾದು ಹೋಗುವಂತೆ ಮೆರವಣಿಗೆಯೊಂದನ್ನು ನಡೆಸಿದರು. ಸಮುದಾಯವು ಕಲಿಕೆಯನ್ನು ಕುರಿತಂತೆ ತಮ್ಮ ಮಕ್ಕಳ ಆಸಕ್ತಿಯಲ್ಲಿ ಸುಧಾರಣೆಯಾಗಿರುವುದನ್ನು ಕಣ್ನಾರೆ ಕಾಣಲಾರಂಭಿಸಿತು.

ಸಮುದಾಯದ ಜನರಲ್ಲಿ ಜಾತಿಭೇದ ಮುಂದುವರೆದಿದೆ. ಆದ್ದರಿಂದ, ಗುಂಪು ಕೆಲಸಗಳನ್ನು ನೀಡಿದಾಗ ವಿದ್ಯಾರ್ಥಿಗಳು ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದ್ದು, ಸಮುದಾಯದ ಕೆಲವು ಸದಸ್ಯರು ತಮ್ಮ ಮಕ್ಕಳು ಹಿಂದುಳಿದ ಸಮುದಾಯದ ಮಕ್ಕಳೊಡನೆ ಬೆರೆಯುವುದಕ್ಕೆ ಬಿಡಲು ನಿರಾಕರಿಸಿದರು. ಮಕ್ಕಳು ಒಟ್ಟಿಗೆ ಬೆರೆತು ಕೆಲಸ ಮಾಡುವುದನ್ನು ಕಲಿಯುವ ಅವಕಾಶವನ್ನು ಒದಗಿಸಿದ್ದು ಶಾಲೆ. ಇದಕ್ಕೆ ಅನುಕೂಲವಾಗಲೆಂದು ಶಾಲೆಯು ಭಾನುವಾರಗಳಂದೂ ತೆರೆದಿರುತ್ತಿತ್ತು. ಆರಂಭದಲ್ಲಿ ಮಕ್ಕಳ ತಂದೆ ತಾಯಿಯರು ವಿವಿಧ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳು ಪರಸ್ಪರ ಬೆರೆಯುವುದನ್ನು ವಿರೋಧಿಸಿದರೂ ವಿದ್ಯಾರ್ಥಿಗಳು ಜಾತಿಯ ಅಡೆತಡೆಗಳನ್ನು ನಿವಾರಿಸಿಕೊಂಡರು. ಶಾಲೆಯು ಕನಿಷ್ಠ ಪಕ್ಷ ಮಕ್ಕಳು ಶಾಲೆಯಲ್ಲಿ ಇರುವಾಗಲಾದರೂ ಈ ಕುರಿತಾಗಿ ಸ್ವಲ್ಪ ಯಶಸ್ಸನ್ನು ಸಾಧಿಸಿದೆ.

ಭವಿಷ್ಯದ ಯೋಜನೆಗಳು:

ಧರ್ಮಪಾಲ ಅವರು ಶಾಲೆಯಲ್ಲಿ ವಿಜ್ಞಾನ ಉದ್ಯಾನವೊಂದನ್ನು ಬೆಳೆಸಲು ಬಯಸುತ್ತಾರೆ. ಕುಪ್ಪಂನ ಅಗಸ್ತ್ಯ ಇಂಟರ್‌ನ್ಯಾಷನಲ್‌ ಫೌಂಡೇಷನ್‌ನಲ್ಲಿ ಇಂತಹದೊಂದು ಉದ್ಯಾನವನ್ನು ಅವರು ನೋಡಿದ್ದಾರೆ. ಇಂತಹ ಉದ್ಯಾನದಿಂದಾಗಿ ವಿಜ್ಞಾನದ ಕಲಿಕೆಯು ಒಂದು ಮೋಜಾಗುತ್ತದೆ ಹಾಗೂ ರೋಮಾಂಚಕಾರಿಯಾಗುತ್ತದೆ ಎಂಬುದು ಅವರ ನಂಬಿಕೆ. ಅವರು ಈ ವರ್ಷ ವಿಜ್ಞಾನ ಮೇಳವೊಂದನ್ನು ಸಫಲವಾಗಿ ನೆರವೇರಿಸಿದರು ಹಾಗೂ ಇದು ಶಾಲೆಯಲ್ಲಿ ಶಾಶ್ವತವಾಗಿ ನಡೆಯಬೇಕೆಂದು ಬಯಸುತ್ತಾರೆ. ಇದು ಶಾಲೆಗೆ ಮಾನ್ಯತೆಯನ್ನು ತಂದುಕೊಡುವುದಷ್ಟೇ ಅಲ್ಲ ವಿದ್ಯಾರ್ಥಿಗಳಿಗೆ ಹೊರಪ್ರಪಂಚ ಹಾಗೂ ಹೊರಗಿನ ಜನರ ಒಡನಾಟ ದೊರೆಯುವಂತೆ ಮಾಡುತ್ತದೆ. ಇದರಿಂದ ಅವರು ಆತ್ಮ ವಿಶ್ವಾಸ ಗಳಿಸುತ್ತಾರೆ.

ಮುಂದಿನ ವರ್ಷ ಧರ್ಮಪಾಲ ಅವರು ಸೇವೆಗೆ ಸೇರಿ ಹತ್ತು ವರ್ಷಗಳು ಪೂರ್ಣವಾಗುತ್ತವೆ. ಆ ವೇಳೆಗೆ, ಒಂದು ದಶಕದ ಅವಧಿಯಲ್ಲಿ ತಾವು ಮಾಡಿದ ಗಣನೀಯ ಪ್ರಮಾಣದ ಕೆಲಸ ಕಾರ್ಯಗಳತ್ತ ಹೊರಳಿ ನೋಡಲು ಸಾಧ್ಯವಾಗುವುದೆಂದು ಅವರು ಆಶಿಸುತ್ತಾರೆ.

ಸಮಸ್ಯಾತ್ಮಕ ನಂಬಿಕೆಗಳು ಹಾಗೂ ಆಚರಣೆಗಳು:

2012 ರಲ್ಲಿ ಅವರ ಮೂವರು ಸಹೋದ್ಯೋಗಿಗಳು ಶಾಲೆಯಿಂದ ವರ್ಗಾಯಿಸಲ್ಪಟ್ಟಾಗ, 150 ವಿದ್ಯಾರ್ಥಿಗಳ ಗುಂಪುಗಳನ್ನು ನಿಭಾಯಿಸಲು ಕೇವಲ ಮೂವರು ಶಿಕ್ಷಕರಷ್ಟೇ ಉಳಿದಿದ್ದರು. ಧರ್ಮಪಾಲ ಅವರ ನಂಬಿಕೆಯ ಪ್ರಕಾರ ಪರಿಣಾಮಕಾರಿಯಾಗಿದ್ದ ಒಂದೇ ವಿಧಾನವೆಂದರೆ ಶಿಕ್ಷೆ ನೀಡುವುದು. ಮಕ್ಕಳು ಹೆದರಿಕೆ, ಭಯದಿಂದಷ್ಟೇ ಕೆಲಸ ಮಾಡುತ್ತಾರೆ. ಮಕ್ಕಳು ಶಿಕ್ಷೆಯನ್ನು ತಪ್ಪಿಸಿಕೊಳ್ಳಲೆಂದು ಅಭ್ಯಾಸ ಮಾಡುತ್ತಾರೆ. ಮಕ್ಕಳು ಶಿಕ್ಷಕರಿಗೆ ಭಯ ಪಡಬೇಕು, ತರುವಾಯ ಶಿಕ್ಷಕರು ಅವರಲ್ಲಿರುವ ಭಯವನ್ನು ಹೋಗಲಾಡಿಸಲು ಪ್ರಯತ್ನ ಪಡಬೇಕು ಎಂದು ಅವರು ಬಲವಾಗಿ ನಂಬಿದ್ದಾರೆ.

ಧರ್ಮಪಾಲ ಅವರಿಗೆ ಇದು ಕಾನೂನಿಗೆ ವಿರುದ್ಧವಾಗಿದೆ ಎನ್ನುವುದು ಚೆನ್ನಾಗಿ ಗೊತ್ತು. ತಮ್ಮ ಶಿಕ್ಷಕ ಶಿಕ್ಷಣ ದಲ್ಲಿ ಶಿಕ್ಷೆಯು ಉಚಿತ ವರ್ತನೆಯನ್ನು ಬೆಳೆಸಲು ಸಹಾಯಕವಾಗುವುದಿಲ್ಲ ಎನ್ನುವುದನ್ನು ಕೂಡ ಅವರು ಕಲಿತಿದ್ದಾರೆ. ಆದರೆ ವಾಸ್ತವದಲ್ಲಿ, ಅವರ ಅನುಭವ ಮತ್ತು ಅವರು ಕಲಿತ ಸಂಗತಿಗಳು ಒಂದಕ್ಕೊಂದು ವಿರುದ್ಧವಾಗಿದ್ದವು. ಭಯ ಇದ್ದಲ್ಲಿ ಭಕ್ತಿ ಅಥವಾ ಶ್ರದ್ದೆ ಇರುತ್ತದೆ, ಭಕ್ತಿ ಅಥವಾ ಶ್ರದ್ಧೆಯು ಶಿಸ್ತಿಗೆ ಕಾರಣವಾಗುತ್ತದೆ ಎಂದು ಅವರು ತಮ್ಮ ಆಚರಣೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಕೆಲವು ವಿದ್ಯಾರ್ಥಿಗಳಿಗೆ ತಾವು ಶಿಕ್ಷೆ ನೀಡಿದಾಗಲೆಲ್ಲ ಇನ್ನಿತರ ವಿದ್ಯಾರ್ಥಿಗಳಿಗೆ ಅದು ಎಚ್ಚರಿಕೆಯಾಗುತ್ತದೆ. ಈಗ ಅವರು ಶಿಕ್ಷೆ ನೀಡದಿದ್ದರೂ ಶಿಕ್ಷೆಯ ಭಯ ಅವರ ವಿದ್ಯಾರ್ಥಿಗಳನ್ನು ಕೆಲಸ ಮಾಡುವಂತೆ ಮಾಡುತ್ತಿದೆ ಎಂದು ಅವರು ನಂಬಿದ್ದಾರೆ..

ಶಿಕ್ಷೆಯಲ್ಲಿ ಧರ್ಮಪಾಲ ಅವರಿಗಿರುವ ನಂಬಿಕೆಯು ಶಿಕ್ಷಕರಿಗೂ ವಿಸ್ತರಿಸುತ್ತದೆ. ಶಿಕ್ಷಕರು ತಮ್ಮ ಕೆಲಸದಲ್ಲಿ ಅಥವಾ ಶಿಕ್ಷಕ ಅಭಿವೃದ್ಧಿ ಚಟುವಟಿಕೆಗಳಲ್ಲಿ ಶ್ರದ್ಧೆಯನ್ನು ತೋರಿಸುವುದಿಲ್ಲ ಯಾಕೆಂದರೆ, ಮಾಡದೇ ಇದ್ದರೂ ಏನೂ ತೊಂದರೆ ಇಲ್ಲ. ಭಾಗವಹಿಸದೇ ಹೋದರೆ ತಮಗೆ ಶಿಕ್ಷೆ ನೀಡಲಾಗುವುದು ಎಂದು ನಿಯಮವಿದ್ದರೆ ತಪ್ಪದೆ ಅದನ್ನು ಪಾಲಿಸುತ್ತಾರೆ ಎಂದು ಅವರು ಬಲವಾಗಿ ನಂಬಿದ್ದಾರೆ.

ಕೆಲವು ತಂದೆತಾಯಿಯರು ಮಕ್ಕಳಿಗೆ ಶಿಕ್ಷೆ ನೀಡುವ ಅವರ ವಿಧಾನವನ್ನು ಪ್ರಶ್ನಿಸಿದರು ಎಂದು ಧರ್ಮಪಾಲ ಹೇಳುತ್ತಾರೆ. ಆದರೆ ಅವರು ಬದಲಾಗಲಿಲ್ಲ. ಕೆಲವು ತಂದೆತಾಯಿಯರು ನೀಡಿದ ದೂರಿನ ಆಧಾರದ ಮೇಲೆ ಅವರನ್ನು ಕೆಲಕಾಲ ಶಾಲೆಯಿಂದ ವರ್ಗಾವಣೆ ಕೂಡ ಮಾಡಲಾಗಿತ್ತು. ಅವರು ಇಂತಹದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ತನ್ನ ವಿಧಾನವು ಪರಿಣಾಮಕಾರಿ, ತಾನದನ್ನು ಮುಂದುವರೆಸುತ್ತೇನೆ ಎಂದವರು ಹೇಳುತ್ತಾರೆ. ಕೇವಲ ಆರಂಭಿಕ ವರ್ಷಗಳಲ್ಲಿ ಹಾಗೂ ಕೇವಲ ಕೆಲವು ವಿದ್ಯಾರ್ಥಿಗಳಿಗೆ ಮಾತ್ರ ಶಿಕ್ಷೆಯು ಅವರನ್ನು ಸರಿದಾರಿಗೆ ತರಲು ಅಗತ್ಯವಾಗುತ್ತದೆ ಎಂಬುದನ್ನು ಅವರು ಒತ್ತಿ ಹೇಳುತ್ತಾರೆ.

ಉಪಸಂಹಾರ:

ಧರ್ಮಪಾಲ ಅವರಲ್ಲಿ ಒಬ್ಬ ಚೈತನ್ಯಶೀಲ ಶಿಕ್ಷಕನನ್ನು ಕಾಣಬಹುದು. ಅವರು NCF ನ್ನು ಚೆನ್ನಾಗಿ ಓದಿರುವಂತೆ ಕಾಣುತ್ತದೆ. ವಿದ್ಯಾರ್ಥಿ-ಕೇಂದ್ರಿತ ಕಲಿಕೆಯ ಕಾರ್ಯತಂತ್ರಗಳನ್ನು ಹೇಗೆ ಅನುಷ್ಠಾನಗೊಳಿಸಬೇಕು ಎನ್ನುವ ಕುರಿತಾಗಿ ಅವರಿಗೆ ಸ್ಪಷ್ಟತೆಯಿದೆ. ವಿದ್ಯಾರ್ಥಿಗಳು ತಮ್ಮ ಶಾಲಾ ಅವಧಿಯಲ್ಲಿ ತೊಡಗಿಕೊಳ್ಳುವ ವಿವಿಧ ಚಟುವಟಿಕೆಗಳು ಅದನ್ನು ಸೂಚಿಸುತ್ತವೆ. ಅದೇ ಹೊತ್ತಿಗೆ, ಮಕ್ಕಳಿಗೆ ಶಿಕ್ಷೆ ನೀಡಬಾರದು ಎನ್ನುವುದನ್ನು ಅವರು ನಂಬಿದಂತೆ ಕಾಣುವುದಿಲ್ಲ. ಶಿಕ್ಷೆ ನೀಡುವ ಅವರ ಕ್ರಮವು ನಿಶ್ಚಿತವಾಗಿಯೂ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ಆಚರಣೆಗಳು ಶಾಲೆಗಳ ನೀತಿನಿಯಮಗಳಿಗೆ ಕೂಡ ವಿರುದ್ಧವಾಗಿವೆ. ಆದಾಗ್ಯೂ ವಿದ್ಯಾರ್ಥಿಗಳ ನಡತೆಯಲ್ಲಿ ಅಪೇಕ್ಷಿತ ಬದಲಾವಣೆಗಳನ್ನು ತರುವಲ್ಲಿ ಶಿಕ್ಷೆ ಕೆಲಸ ಮಾಡುತ್ತದೆ ಎನ್ನುವುದು ಧರ್ಮಪಾಲ ಅವರ ಬಲವಾದ ನಂಬಿಕೆ. ಒಬ್ಬ ಪ್ರಗತಿಪರ ಬೋಧನಾ ಆಚರಣೆಗಳನ್ನು ಬಳಸುವ ಶಿಕ್ಷಕನಾಗಿ ಅವರು ಪಾಲಿಸುವ ಶಿಕ್ಷೆಯ ವಿಧಾನವು ಏಕಕಾಲಕ್ಕೆ ಪ್ರಗತಿಪರ ಬೋಧನಾ ಆಚರಣೆಗಳ ಎರಡು ತದ್ವಿರುದ್ಧ ಕೊನೆಗಳಲ್ಲಿ ಇರುವ ಶಿಕ್ಷಕನೊಬ್ಬನ ನಂಬಿಕೆಗಳ ಅನನ್ಯ ಉದಾಹರಣೆಯನ್ನು ನಮ್ಮ ಮುಂದಿಡುತ್ತದೆ.

ಕೃತಜ್ಞತೆಗಳು:

ಅವಿರತ ಕೆಲಸಕಾರ್ಯಗಳ ನಡುವೆ ಬಿಡುವು ಮಾಡಿಕೊಂಡು ತಮ್ಮ ವೃತ್ತಿ ಆಚರಣೆಗಳ ಕುರಿತಂತೆ ತಮ್ಮ ಅನುಭವ ಹಾಗೂ ಪರ್ಯಾಲೋಚನೆಗಳನ್ನು ಹಂಚಿಕೊಂಡಿದ್ದಕ್ಕೆ ವಿಜ್ಞಾನ ಶಿಕ್ಷಕರಾದ ಧರ್ಮಪಾಲ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. [ಶಾಲಾ ಭೇಟಿಯ ಸಂದರ್ಭದಲ್ಲಿ ಸಂವಾದಕ್ಕೆ ಅವಕಾಶ ಮಾಡಿ ನಮ್ಮೊಂದಿಗೆ ಸಹಕರಿಸಿದ ವಿದ್ಯಾರ್ಥಿಗಳಿಗೆ ಹೃದಯಪೂರ್ವಕ ಧನ್ಯವಾದಗಳು.] ಬಿಡುವು ಮಾಡಿಕೊಂಡು ಶಾಲೆಗೆ ಭೇಟಿ ನೀಡಿದ ಮತ್ತು ತಮ್ಮ ಆಲೋಚನೆಗಳನ್ನು ಹಾಗು ಅನುಭವಗಳನ್ನು ಹಂಚಿಕೊಂಡ ಸಮುದಾಯದ ಸದಸ್ಯರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು. ಶಿಕ್ಷಕರನ್ನು ಗುರುತಿಸಲು ಮತ್ತು ಅವರ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದ ಮತ್ತು ಕ್ಷೇತ್ರ ಭೇಟಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ ಗುಲ್ಬುರ್ಗಾ ಡಿಸ್ಟ್ರಿಕ್ಟ್ ಇನ್ಸ್ಟಿಟ್ಯೂಟ್, ಅಜೀಂ ಪ್ರೇಂಜಿ ಫೌಂಡೇಶನ್‍ ಅವರಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು.

Print Friendly, PDF & Email

Leave a Reply

Your email address will not be published.

Scroll to top